ಕರಪತ್ರ, ಪೋಸ್ಟರ್ ಮುದ್ರಣ; ನಿಯಮ‌ ಪಾಲನೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ

WhatsApp Group Join Now
Telegram Group Join Now

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಣ ಮಾಡುವಾಗ ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 127 ಎ ನಿಯಮಾವಳಿಗಳನ್ನು ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಏ‌.6) ನಡೆದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಅಭ್ಯರ್ಥಿಗಳು ಅಥವಾ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಕರಪತ್ರ ಅಥವಾ ಪೋಸ್ಟರ್ ಗಳನ್ನು ಮುದ್ರಣಕ್ಕೆ ನೀಡಿದಾಗ ಅವುಗಳನ್ನು ಮುದ್ರಿಸುವ ಮುಂಚೆ ನಿಯಮಾನುಸಾರ ಭರ್ತಿ ಮಾಡಿದ ಅಪೆಂಡಿಕ್ಸ್ ‘ಎ’ ನಮೂನೆಯನ್ನು ಅವರಿಂದ ಪಡೆದುಕೊಳ್ಳಬೇಕು.

 

ಕರಪತ್ರ ಹಾಗೂ ಪೋಸ್ಟರ್ ಗಳನ್ನು ಮುದ್ರಿಸಿದ ಬಳಿಕ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಅಪೆಂಡಿಕ್ಸ್ ‘ಬಿ’ ನಮೂನೆಯನ್ನು ಭರ್ತಿ ಮಾಡಿ ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ/ಚುನಾವಣಾಧಿಕಾರಿಗಳಿಗೆ ಅಥವಾ ಚುನಾವಣಾ ವೆಚ್ಚ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕು.

 

ಕರಪತ್ರ ಹಾಗೂ ಪೋಸ್ಟರ್ ಗಳಲ್ಲಿ ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಮುದ್ರಣಾಲಯ ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ಇತ್ಯಾದಿ ವಿವರವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ತಿಳಿಸಿದರು.

 

ಮುದ್ರಣದ ವೆಚ್ಚವನ್ನು ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಲು ಅನುಕೂಲವಾಗುವಂತೆ ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಪ್ರತಿಗಳ ಜತೆಗೆ ಅಪೆಂಡಿಕ್ಸ್ ಎ, ಬಿ ಹಾಗೂ ವೆಚ್ಚದ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ ತಿಳಿಸಿದರು.

 

ಪ್ರಕಾಶಕರು ದ್ವಿಪ್ರತಿಯಲ್ಲಿ ಮುದ್ರಕರಿಗೆ ಡಿಕ್ಲೇರೇಷನ್ ಸಲ್ಲಿಸಬೇಕು. ಕರಪತ್ರಗಳ ಮುದ್ರಣದ ಬಳಿಕ ಮುದ್ರಕರು ನಿಗದಿತ ಅಪೆಂಡಿಕ್ಸ್ “ಎ” ಮತ್ತು “ಬಿ” ನಮೂನೆಗಳಲ್ಲಿ ಭರ್ತಿಮಾಡಿ ಮುದ್ರಿತ ಪ್ರತಿಗಳೊಂದಿಗೆ ಸಲ್ಲಿಸಬೇಕು.

 

ಯಾವುದೇ ರೀತಿಯ ಕಾನೂನುಬಾಹಿರ ವಿಷಯಗಳನ್ನು ಮುದ್ರಿಸಬಾರದು. ಜಾತಿಧರ್ಮಗಳು, ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುದ್ರಿಸಬಾರದು ಎಂದು ನಿರ್ದೇಶನ ನೀಡಿದರು.

 

ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ‌ ಪಂಚಾಯತಿಯಿಂದ ಸೂಕ್ತ ಅನುಮತಿ ಪಡೆಯದೇ ಅನಧಿಕೃತವಾಗಿ ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ಅಳವಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

 

ಪ್ರಕಾಶಕರು-ಮುದ್ರಕರ ಮಾಹಿತಿ ಕಡ್ಡಾಯ:

ಪೋಸ್ಟರ್ ಹಾಗೂ ಕರಪತ್ರಗಳನ್ನು ಮುದ್ರಿಸುವಾಗ ಕಡ್ಡಾಯವಾಗಿ ಪ್ರಕಾಶಕರು ಹಾಗೂ ಮುದ್ರಕರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಲೋಕಲ್ ಆಡಿಟ್ ಸರ್ಕಲ್ ಜಂಟಿ‌ ನಿರ್ದೇಶಕರು ಹಾಗೂ ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಶಂಕರಾನಂದ ಬನಶಂಕರಿ ತಿಳಿಸಿದರು.

 

ಪ್ರಕಾಶಕರು ಮುದ್ರಣಕ್ಕೆ‌ ಮುಂಚಿತವಾಗಿಯೇ ಅಪೆಂಡಿಕ್ಸ್ “ಎ” ಜತೆಗೆ ದ್ವಿಪ್ರತಿಯಲ್ಲಿ ಘೋಷಣಾ ಪತ್ರವನ್ನು ಸಲ್ಲಿಸಬೇಕು.

 

ಒಂದು ವೇಳೆ ನಿಯಮ ಪಾಲಿಸದಿದ್ದರೆ 6 ತಿಂಗಳು ಜೈಲುಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಏನೇ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವಾಗ ಜಾತಿಧರ್ಮ, ವ್ಯಕ್ತಿಗತ ನಿಂದನೆ, ಭಾಷಾ ಸಾಮರಸ್ಯ ಕದಡುವಂತಹ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುದ್ರಿಸಬಾರದು.

 

ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಕೋಮುಭಾವನೆ ಕೆರಳಿಸುವಂತಹ ವಿಷಯಗಳನ್ನು ಮುದ್ರಿಸಬಾರದು ಎಂದು ತಿಳಿಸಿದರು.

 

ಕರಪತ್ರ, ಪೋಸ್ಟರ್ ಪೂರ್ವಪರಿಶೀಲನೆ:

 

ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಪೋಸ್ಟರ್ ಅಥವಾ ಕರಪತ್ರಗಳನ್ನು ಮುದ್ರಣಕ್ಕೆ ನೀಡುವ ಮುಂಚೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ‌ ಹಾಗೂ ಕಣ್ಗಾವಲು ಘಟಕ(ಎಂಸಿಎಂಸಿ)ದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು.

 

ಎಂಸಿಎಂಸಿ‌ ಘಟಕದಲ್ಲಿ ಸದರಿ ಮಾಹಿತಿಯನ್ನು ಪರಿಶೀಲಿಸಿ ಸಮರ್ಪಕವಾಗಿದೆ ಎಂದು ಪ್ರಮಾಣೀಕರಿಸಿದ ಬಳಿಕ ಅಪೆಂಡಿಕ್ಸ್ “ಎ” ಜತೆಗೆ ಮುದ್ರಣಾಲಯಕ್ಕೆ ಸಲ್ಲಿಸಬೇಕು ಎಂದು ಶಂಕರಾನಂದ ಬನಶಂಕರಿ ತಿಳಿಸಿದರು.

 

ಈಗಾಗಲೇ ನಿಗದಿಪಡಿಸಲಾಗಿರುವ ಎಸ್.ಆರ್. ದರಪಟ್ಟಿಯ ಪ್ರಕಾರ ಮುದ್ರಣದ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ ನಿಗದಿತ ಮೊತ್ತಕ್ಕಿಂತ‌ ಕಡಿಮೆ ಮೊತ್ತದ‌ ಬಿಲ್ ನೀಡದಂತೆ ತಿಳಿಸಿದರು.

 

ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಬೇಕಾಗುತ್ತದೆ. ಆದ್ದರಿಂದ ನಿಯಮಾನುಸಾರ ಮುದ್ರಣ ಕಾರ್ಯ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಅವರು ತಿಳಿಸಿದರು.

 

ಕ್ಯಾಶ್ ರಿಲೀಸ್ ಕಮಿಟಿ ಸದಸ್ಯ ಕಾರ್ಯದರ್ಶಿ ಗೌರಿಶಂಕರ ಕಡೆಚೂರು, ಜಿಲ್ಲಾ ಮಾಧ್ಯಮ ಪ್ರಮಾಣೀಕರ ಹಾಗೂ ಕಣ್ಗಾವಲು ಘಟಕ(ಎಂಸಿಎಂಸಿ) ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಬೆಳಗಾವಿ ನಗರ ಸೇರಿದಂತೆ ವಿವಿಧ ತಾಲ್ಲೂಕುಗಳ ಮುದ್ರಣಾಲಯದ ಮಾಲೀಕರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Back to top button