ನಾಗರಗಾಳಿ ವಲಯ ಅರಣ್ಯ ಅಧಿಕಾರಿ RFO ವಿರುದ್ಧ ಕೂಲಿಗಾರರ ಕಚೇರಿ ಮುಂದೆ ಧರಣಿ

WhatsApp Group Join Now
Telegram Group Join Now

ಖಾನಾಪುರ: ನಾಗರಗಾಳಿ ವಲಯ ಅರಣ್ಯ ಅಧಿಕಾರಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರೇಗಾ ಕೂಲಿಕಾರರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.

 

ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ಒದಗಿಸುವಂತೆ ಗುರುವಾರ ಗೋಟಗಾಳಿ ಗ್ರಾ.ಪಂ. ಆವರಣದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಅವರ ಮೂಲಕ ನಾಗರಗಾಳಿ ಆರ್.ಎಫ್.ಒ ಪ್ರಶಾಂತ ಅವರನ್ನು ಸಂಪರ್ಕಿಸಿ ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವಂತೆ ಕೋರಿದ್ದರು. ಆದರೆ ಆರ್‌ಎಫ್‌ಒ, ಅರಣ್ಯ ಪ್ರದೇಶದಲ್ಲಿ ನರೇಗಾ ಕೂಲಿಕಾರರಿಗೆ ಕೆಲಸ ನೀಡಲು ಸಾಧ್ಯವಿಲ್ಲ ಎಂದಿದ್ದರು.

 

ಇದರಿಂದ ಅಸಮಾಧಾನಗೊಂಡ ಕೂಲಿಕಾರರು ಶುಕ್ರವಾರ ನೇರವಾಗಿ ನಾಗರಗಾಳಿ ಆರ್‌ಎಫ್‌ಒ ಕಚೇರಿಗೆ ತೆರಳಿ ಧರಣಿ ಕೈಗೊಂಡರು. ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಮುಂದೆ ಮೂರು ಗಂಟೆಗಳ ಕಾಲ ಧರಣಿ ನಡೆಸಿದ ಐವತ್ತಕ್ಕೂ ಹೆಚ್ಚು ನರೇಗಾ ಕೂಲಿಕಾರರು ತಮ್ಮ ಧರಣಿಯ ವಿಷಯ ಅರಿತ ತಾಪಂ ಇಒ ಮತ್ತು ನರೇಗಾ ಸಹಾಯಕ ನಿರ್ದೇಶಕರು ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಆಲಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಕೂಲಿಕಾರರು, ‘ಗೋಟಗಾಳಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳು ಅರಣ್ಯ ಪ್ರದೇಶದಿಂದಲೇ ಸುತ್ತುವರೆದಿವೆ. ಅರಣ್ಯ ವಲಯವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಕೆಲಸ ಸ್ಥಳಾವಕಾಶ ಇಲ್ಲದಿರುವುದರಿಂದ ಅರಣ್ಯ ಪ್ರದೇಶದಲ್ಲಿ ಟ್ರಂಚ್, ಸಿಪಿಟಿ ಸೇರಿ ಇನ್ನಿತರೆ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಗ್ರಾಪಂ ಕಚೇರಿಯ ಮೂಲಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿ ದಿನಗಳೇ ಗತಿಸಿದರೂ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲ. ಇದರಿಂದ ನರೇಗಾ ಯೋಜನೆಯನ್ನೇ ನಂಬಿರುವ ನೂರಾರು ಕಾರ್ಮಿಕರ ಜೀವನನಿರ್ವಹಣೆಗೆ ತೊಂದರೆ ಉಂಟಾಗಿದೆ’ ಎಂದರು.

WhatsApp Group Join Now
Telegram Group Join Now
Back to top button