BREAKING: ಕಿರಾತಕ ಸಿನಿಮಾ ವಿಲನ್ ಡ್ಯಾನಿಯಲ್ ಬಾಲಾಜಿ ನಿಧನ
ಬೆಂಗಳೂರು, ಮಾರ್ಚ್ 30: ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದ ನಟ ಡ್ಯಾನಿಯಲ್ ಬಾಲಾಜಿ (48) ವಿಧಿವಶರಾಗಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ನಿನ್ನೆ( ಮಾರ್ಚ್ 29) ಶುಕ್ರವಾರದಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಡ್ಯಾನಿಯಲ್ ಬಾಲಾಜಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಪಾರ್ಥಿವ ಶರೀರವನ್ನು ಶನಿವಾರ ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.
ನಟ ಡ್ಯಾನಿಯಲ್ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ವಿಲನ್ ಆಗಿದ್ದರು.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಡ್ಯಾನಿಯಲ್ ಬಾಲಾಜಿ ಕನ್ನಡ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್ವರ್ಲ್ಡ್ ಹಾಗೂ ಡವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರಿಗೂ ಕೂಡ ಚಿರಪರಿಚಿತರಾಗಿದ್ದರು.
ಸಿನಿಮಾ ರಂಗ ಹೊರತು ಪಡಿಸಿ ಧಾರ್ಮಿಕ ಕಾರ್ಯಗಳಲ್ಲೂ ಡ್ಯಾನಿಯಲ್ ಬಾಲಾಜಿ ಸಕ್ರಿಯರಾಗಿದ್ದು, ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.